ಭಾನುವಾರ, ನವೆಂಬರ್ 15, 2009

ಓರ್ವ "ನಾಯಕ" ದುರ್ಬಲನಾಗುತ್ತ ಪತನಗೊಳ್ಳುವ ಬಗೆ

ಕರ್ಣಾಟಕದ ರಾಜಕೀಯ ಇತಿಹಾಸದಲ್ಲಿ ನಾಯಕನೊಬ್ಬ ದುರ್ಬಲನಾಗುತ್ತ ಸಾಗುವ ರೀತಿಗೆ ಯಡಿಯೂರಪ್ಪ ಅವರಿಗಿಂತ ಉತ್ತಮ ಉದಾಹರಣೆ ಇನ್ನೊಂದಿರಲಾರದು.ಅಧಿಕಾರಕ್ಕಾಗಿ ಹಸಿದಿದ್ದ ಪಕ್ಷ ಮತ್ತು ಅದರ ನಾಯಕ ಹೇಗೆ ಪತನದ ಹಾದಿ ಹಿಡಿಯಬಹುದೆನ್ನುವುದನ್ನೂ ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು ತೋರಿಸುತ್ತವೆ.
ಹಾಗೆ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾಲವೂ  ಪಕ್ವವಾಗಿರಲಿಲ್ಲ.ಬಸವಣ್ಣ,ಶಿಶುನಾಳ ಶರೀಫಾ,ಯೋಗಿ ನಾರಾಯಣ,ಲಂಕೇಶರಂಥವರು ಹುಟ್ಟಿದ ಕನ್ನಡ ನಾಡಿನಲ್ಲಿ ಬಿಜೆಪಿ ತನ್ನ ತತ್ವಗಳಿಂದಲೇ ಅಧಿಕಾರಕ್ಕೆ ಬರುವಷ್ಟು ಶಕ್ತಿಶಾಲಿಯಾಗಿ ಬೆಳೆದಿರಲಿಲ್ಲ.ಇಂಥ ಮಹಾನುಭಾವರು ಬೋಧಿಸಿದ ಜಾತ್ಯತೀತ,ಧರ್ಮ ಸಮನ್ವಯ,ಮಾನವೀಯತೆಯೇ ಅಂತಿಮ ಸತ್ಯವೆಂಬ ವಿಚಾರಗಳ ಎದುರು ಸಾಮರಸ್ಯ ಕದಡುವ ,ಅಮಾನವೀಯ,ಕೈಕಾಲುಗಳಿಲ್ಲದ ತರ್ಕಹೀನ ವಿಚಾರಗಳಿಗೆ ಕರ್ಣಾಟಕದ ಅಂತರಾತ್ಮವನ್ನು ಕದಡುವ ಶಕ್ತಿಯೇ ಇರಲಿಲ್ಲ.ಪುರೋಹಿತಶಾಹಿ ಮನಸ್ಸು   ಅನಗತ್ಯವಾಗಿ ಸೃಷ್ಟಿಸಿದ ಬಾಬಾ ಬುಡನಗಿರಿ ವಿವಾದ, ಹುಬ್ಬಳ್ಳಿ ಈದ್ಗಾ ಗದ್ದಲದ ಜತೆ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ  ಎಸ್.ಎಂ.ಕೃಷ್ಣ,ಎಚ್.ಡಿ.ಕುಮಾರಸ್ವಾಮಿ,ಜೆಡಿಎಸ್ ವರಿಷ್ಠ ದೇವೇಗೌಡರೂ ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಗಿದ್ದಾರೆ.
ಈ ನೆಲದ ಜನರ ನಡುವೆ ಪರಸ್ಪರ ಸಂಶಯ ಹುಟ್ಟಿಸುವ ಜಾತಿ,ಧರ್ಮಗಳ ವಿಷ ಬೀಜ ಬಿತ್ತಿದ ಮಡಿ ಮೈಲಿಗೆಯ ಮಾತನಾಡುವ ರೋಗಗ್ರಸ್ಥ ,ಕ್ಷುದ್ರ ಮನಸುಗಳು ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿ ನಾಡಿನ ಹಿತವನ್ನು ಮರೆತರು.ಜಾತಿ,ಧರ್ಮ,ದೇವರು ದಿಂಡರುಗಳೇ ಜನರ ಬದುಕಿನ ಮಾರ್ಗವನ್ನು ತೋರಿಸುವ ಪುರೋಹಿತಶಾಹಿಗಳ ಪರೋಕ್ಷ ಹಿಡಿತದಲ್ಲಿರುವ ಈ ದೇಶದಲ್ಲಿ ಸಮೂಹ ಸನ್ನಿಗೆ ಒಳಪಡಿಸುವ ಚಿಲ್ಲರೆ ಸಂಗತಿಗಳೇ ಸದೃಢವಾಗಿ ಬೆಳೆಯತೊಡಗಿದವು.ಇಷ್ಟಾದರೂ ಈ ಕೊಳಕು ಪ್ರಯತ್ನಗಳಿಗೆ ಕರುನಾಡಿನಲ್ಲಿ ಸುಭದ್ರ ಅಡಿಪಾಯವೇನೂ ಇರಲಿಲ್ಲ.ಅಯೋಧ್ಯೆ,ಶ್ರೀರಾಮಚಂದ್ರ,ರಾಮಜ್ಯೋತಿ,ರಥ ಯಾತ್ರೆ,ಇಟ್ಟಿಗೆ ವಿಚಾರಗಳೂ ಕನ್ನಡ ನಾಡಿನ ಮಲ್ಲಿಗೆ ಮನಸ್ಸಿನ ಸಿರಿಗಂಧದ ವಾತಾವರಣವನ್ನು  ಮಲಿನ ಮಾಡುತ್ತಾ ಬಂದವೇ ಹೊರತು ಇಡೀ ನಾಡನ್ನು ವ್ಯಾಪಿಸುವಲ್ಲಿ ಯಶಸ್ಸು ಗಳಿಸಲಿಲ್ಲ.
ಎಂಥ ಬೊಬ್ಬೆಗೂ ಶರಣಾಗದ ಕನ್ನಡಿಗರ ನಿಲುವಿನಿಂದ ಹತಾಶ ಸ್ಥಿತಿ ತಲುಪಿದ್ದ ಬಿಜೆಪಿ ನೆರವಿಗೆ ಕೃಷ್ಣ,ಕುಮಾರಸ್ವಾಮಿ,ದೇವೇಗೌಡ ಪರೋಕ್ಷವಾಗಿ ನೆರವಾದರು.ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ಲಿಂಗಾಯತ ಸಮುದಾಯದ ಪ್ರಮುಖ ನಾಯಕರನ್ನು ಮೂಲೆಗುಂಪು ಮಾಡಿದ್ದು,ವೀರೇಂದ್ರ ಪಾಟೀಲ್ ಎರಡನೇ ಸಲ ಮುಖ್ಯಮಂತ್ರಿಯಾದಾಗ ಅವರನ್ನು ಕನಿಷ್ಠ ಸೌಜನ್ಯವೂ ಇಲ್ಲದೆ ಅಧಿಕಾರದಿಂದ (ಅವರಿಗೆ ಆರೋಗ್ಯ ಸರಿ ಇರಲಿಲ್ಲ ಎಂಬ ಸಕಾರಣ ಇದ್ದರೂ)ಇಳಿಸಿದ್ದು, ವೀರೇಂದ್ರ ಪಾಟೀಲ್ ನಂತರ ರಾಜಶೇಖರ ಮೂರ್ತಿ ಮುಖ್ಯಮಂತ್ರಿ ಆಗಬಹುದೆಂಬ ಲಿಂಗಾಯತ ಸಮುದಾಯದ ನಿರೀಕ್ಷೆ ಹುಸಿಯಾಗಿದ್ದು ಕಾಂಗ್ರೆಸ್ ವಿರುದ್ಧ ಲಿಂಗಾಯತರು ತಿರುಗಿ ಬೀಳುವುದಕ್ಕೆ ಕಾರಣವಾಯಿತು.
ದೇವೇಗೌಡರ ನೇತೃತ್ವದ ಜೆಡಿಎಸ್ ನಿಲುವುಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ.ದೇವೇಗೌಡರ ಪ್ರಬಲ ಒಕ್ಕಲಿಗ ಜಾತಿ ಕಾರಣದಿಂದಾಗಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಪ್ರಬಲವಾಗಿದ್ದರೂ ಲಿಂಗಾಯತರ ಪ್ರಭಾವ ಇರುವ ಉತ್ತರ ಕರ್ನಾಟಕದಲ್ಲೂ ಒಂದಷ್ಟು ಶಕ್ತಿ ಹೊಂದಿತ್ತು.ತಮ್ಮ ಪಕ್ಷದ ಹೆಸರಿನ ಜತೆ ಇರುವ "ಜಾತ್ಯತೀತ" ಎಂಬ ಪದದ ಅರ್ಥಕ್ಕೆ ವಿರುದ್ಧವಾಗಿ ಬಹುತೇಕ ಸಲ ನಡೆದುಕೊಂಡಿರುವ ದೇವೇಗೌಡರು ಕೂಡ ತಾವು ಮತ್ತು ತಮ್ಮ ಮಕ್ಕಳ ಅನುಕೂಲಕ್ಕಾಗಿ ತೆಗೆದುಕೊಂಡ ನಿಲುವುಗಳೂ ಅವರಿಗೆ ಗೊತ್ತಿಲ್ಲದಂತೆ ಬಿಜೆಪಿಗೆ ನೆರವಾಗಿವೆ.ಪಕ್ಷದ ಹೆಸರಿಗೆ ತಕ್ಕಂತೆ ಜಾತ್ಯತೀತವಾಗಿ,ಸದೃಢವಾಗಿ ಬೆಳೆಸಬಹುದಾಗಿದ್ದ ಅವಕಾಶವನ್ನೂ ದೇವೇಗೌಡ ಮತ್ತು ಕುಮಾರಸ್ವಾಮಿ ಹಾಳು ಮಾಡಿದ್ದೂ ಬಿಜೆಪಿಗೆ ರಾಜ್ಯದಲ್ಲಿ ಭವಿಷ್ಯ ರೂಪಿಸಲು ಸಹಕರಿಸಿತು.ಕಾಂಗ್ರೆಸ್ ಜತೆಗೂಡಿ ಮೈತ್ರಿ ಸರ್ಕಾರ ರಚಿಸಿದಾಗ ಪಕ್ಷದಲ್ಲಿದ್ದ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ನಿಜಕ್ಕೂ ಮುಖ್ಯಮಂತ್ರಿ ಮಾಡುವ ಎಲ್ಲ ಅವಕಾಶಗಳಿದ್ದರೂ ಅವರನ್ನು ಉಪಮುಖ್ಯಮಂತ್ರಿ ಮಾಡಿ ವಂಚಿಸಿದ್ದು ಕುರುಬ ಸಮುದಾಯದ ಸಿಟ್ಟಿಗೆ ಕಾರಣವಾಯಿತು.ಪಕ್ಷದಲ್ಲಿದ್ದ ವಿವಿಧ ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ನಾಯಕರನ್ನು ಪ್ರಜಾಸತ್ತಾತ್ಮಕವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಕ್ಕಳ ಹಿತಾಸಕ್ತಿಗಾಗಿ ದೇವೇಗೌಡರು ತೆಗೆದುಕೊಂಡ ಏಕಪಕ್ಷೀಯ ತೀರ್ಮಾನಗಳು ಈ ಎಲ್ಲ ಸಮುದಾಯಗಳು ದೇವೇಗೌಡರಿಂದ ದೂರ ಸರಿಯುವಂತೆ ಮಾಡಿದವು.ಸಿದ್ದರಾಮಯ್ಯ ತೆರವು ಮಾಡಿದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಲಿಂಗಾಯತರಾದ ಎಂ.ಪಿ.ಪ್ರಕಾಶ್ ಅವರನ್ನು ದೇವೇಗೌಡರು ತಂದರಾದರೂ ಆನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪ್ರಕಾಶ್ ಉಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಕೇವಲ ಮಂತ್ರಿಯಾದರು.ಆನಂತರ ಜೆಡಿಎಸ್ ನಲ್ಲಿ ಇರಲಾಗದೆ ಕಾಂಗ್ರೆಸ್ ಪಕ್ಷ ಸೇರಿದರು.ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಒಪ್ಪಂದದ ಪ್ರಕಾರ ಇಪ್ಪತ್ತು ತಿಂಗಳ ನಂತರ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡದೆ ವಂಚಿಸಿದ್ದು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಲಿಂಗಾಯತ ಸಮುದಾಯ ಒಗ್ಗೂಡಿ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಗಬೇಕೆಂಬ ನಿರ್ಧಾರ ಕೈಗೊಳ್ಳುವಂತಾಯಿತು.ಆ ಹೊತ್ತಿಗೆ ಇತರ ಪಕ್ಷಗಳಲ್ಲಿದ್ದ ಲಿಂಗಾಯತ ನಾಯಕರನ್ನು ದೇವೇಗೌಡ,ಕೃಷ್ಣ ಮೂಲೆಗುಂಪು ಮಾಡಿದ್ದರು.ಈ ಮೂಲಕ ಜೆಡಿಎಸ್ ಲಿಂಗಾಯತರು,ಕುರುಬರು,ದಲಿತರು,ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಗಳ ಬಹುತೇಕ ಬೆಂಬಲವನ್ನೂ ಕಳೆದುಕೊಂಡಿತು .ದೇವೇಗೌಡರ ಕೇವಲ ಕುಟುಂಬ ರಾಜಕಾರಣಕ್ಕಾಗಿ  ಎಷ್ಟೋ ಸಲ ತೆಗೆದುಕೊಂಡ ತೀರ್ಮಾನಗಳು ಒಕ್ಕಲಿಗ ಪ್ರಮುಖರನ್ನೂ ಇತರ ಪಕ್ಷಗಳಿಗೆ ವಲಸೆ ಹೋಗುವಂತೆ ಮಾಡಿತ್ತು. ಹೀಗೆ ಕಾಂಗ್ರೆಸ್,ಜೆಡಿಎಸ್,ದೇವೇಗೌಡ,ಕುಮಾರಸ್ವಾಮಿ,ಕೃಷ್ಣ ಮಾಡಿದ ತಪ್ಪುಗಳು ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ ಬಿಜೆಪಿ ಕನಸಿಗೆ ರತ್ನಗಂಬಳಿ ಹಾಸಿ ಜೀವ ತುಂಬಿದವು.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಈ ಅಂಶಗಳು ಕಾರಣವಾದವು.ಬಿಜೆಪಿ ಸರ್ಕಾರ ಬರಬೇಕೆಂಬ ಒಲವಿಗಿಂತ ವಂಚನೆಗೊಳಗಾದ ಯಡಿಯೂರಪ್ಪ ಮುಖ್ಯಮಂತ್ರಿ ಆಗಲೇಬೇಕೆಂಬ ಮತದಾರರ ನಿಲುವು ಬಿಜೆಪಿಗೆ ವಾರವಾಯಿತು.ಈ ನಿರ್ಧಾರದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಜತೆ ಯಡಿಯೂರಪ್ಪನವರಿಗಾದ  ಅನ್ಯಾಯದ ವಿರುದ್ಧ ಇತರ ಜಾತಿ,ಸಮುದಾಯಗಳಿಗೆ ಸೇರಿದ ಜನರೂ ಕೈ ಜೋಡಿಸಿದರು.
ಈ ರೀತಿ ಮುಖ್ಯಮಂತ್ರಿಯಾಗುವ ಅದೃಷ್ಟ ಗಿಟ್ಟಿಸಿದ ಯಡಿಯೂರಪ್ಪ ಬಗ್ಗೆ ಕನ್ನಡಿಗರು ಅಪಾರ ನಿರೀಕ್ಷೆ ಇರಿಸಿಕೊಂಡಿದ್ದರು.ಪ್ರಬಲ ಲಿಂಗಾಯತ ಸಮುದಾಯ ಸಹಜವಾಗಿಯೇ ಯಡಿಯೂರಪ್ಪನವರ ಬೆನ್ನ ಹಿಂದೆ ನಿಂತಿತ್ತು.ರಾಜಕೀಯ,ತಾತ್ವಿಕ  ಕಾರಣಗಳು ಬಿಟ್ಟರೆ ಉಳಿದ ಸಮುದಾಯಗಳಿಂದಲೂ ಯಡಿಯೂರಪ್ಪನವರಿಗೆ ಉಳಿದ ಸಮುದಾಯಗಳ ಬೆಂಬಲವೂ ಇತ್ತು.ಸರಳ ಬಹುಮತಕ್ಕೆ ಬೆರಳೆಣಿಕೆ ಸಂಖ್ಯೆಯ ಶಾಸಕರ ಕೊರತೆ ಇತ್ತಾದರೂ ಸರ್ಕಾರ ರಚನೆಗೆ ಅದೇ ಅನಿವಾರ್ಯವಾಗಿರಲಿಲ್ಲ.ಏಕೈಕ ಬಲಿಷ್ಟ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಬುಡ ಅಲ್ಲಾಡಿಸಲು ಕಾಂಗ್ರೆಸ್ ಆಥವಾ ಜೆಡಿಎಸ್ ಮುಂದಾಗಿದ್ದರೂ ಈ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದರು.ಇಂಥ ಸಂದರ್ಭದಲ್ಲೇ ನಾಯಕನಾದವನು ತೆಗೆದುಕೊಳ್ಳುವ ತೀರ್ಮಾನದ ಕಡೆ ಎಲ್ಲರ ಗಮನ ನೆಟ್ಟಿರುತ್ತದೆ.ಕೇಂದ್ರದಲ್ಲಿ ೧೯೮೯  ರಿಂದ ೧೯೯೪ ರವರೆಗೆ   ಸರಳ ಬಹುಮತವಿಲ್ಲದೆ ಕಾಂಗ್ರೆಸ್ ಸರ್ಕಾರ ಮುನ್ನಡೆಸಿದ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಉದಾಹರಣೆಯೂ ನಮ್ಮೆದುರಿದೆ.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಪರ ವಾತಾವರಣ ಇದ್ದಾಗ ಪಕ್ಷೇತರ ಶಾಸಕರು ಸಹಜವಾಗಿಯೇ ಅದರತ್ತ ಮುಖ ಮಾಡುತ್ತಾರೆ.ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪಕ್ಷೇತರರ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸುವ ಕನಸನ್ನೂ ಕಂಡಿರಬಹುದು,ಅದಕ್ಕ್ಕಾಗಿ ಕೆಲವರು  ಪ್ರಯತ್ನಗಳನ್ನೂ ನಡೆಸಿರಬಹುದು.ಈ ಕಾರಣದಿಂದಲೇ ಪಕ್ಷೇತರ ಶಾಸಕರು ಅತ್ತಿಂದಿತ್ತ ಓಡಾಡಿರಬಹುದು.ಆದರೆ ಧರ್ಮಸಿಂಗ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ  ಕೈ ಕೊಟ್ಟಿದ್ದ ಜೆಡಿಎಸ್ ಜತೆ ಕೆಲವೇ ತಿಂಗಳಲ್ಲಿ ಕೈಜೋಡಿಸಲು ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಖಂಡಿತಾ ಮುಂದಾಗುತ್ತಿರಲಿಲ್ಲ.ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಇಲ್ಲಾ,ಶತ್ರುಗಳೂ ಇಲ್ಲಾ ಎಂಬ ಮಾತೇನೋ ಚಾಲ್ತಿಯಲ್ಲಿದೆ.ಆದರೆ ಅದೇ ಸಾರ್ವಕಾಲಿಕ ಸತ್ಯವೇನೂ ಅಲ್ಲ. ಆಗಲೇ ನಿಜವಾದ ನಾಯಕನ ಶಕ್ತಿ ಏನೆಂದು ಬಯಲಾಗುತ್ತದೆ.ಯಡಿಯೂರಪ್ಪನವರು ಪಕ್ಷೇತರ ಶಾಸಕರ ಮನವೊಲಿಸಿ ತಮ್ಮ ನೇತೃತ್ವದ ಸರ್ಕಾರ ರಚನೆಯ ಅನಿವಾರ್ಯತೆ ಮತ್ತು ಅಗತ್ಯವನ್ನು ಮನದಟ್ಟು ಮಾಡಿ ಕೊಡಬೇಕಿತ್ತೆ ಹೊರತು ಎಲ್ಲ ಪಕ್ಷೇತರ ಶಾಸಕರಿಗೆ ಮಂತ್ರಿಗಳಾಗಿಸುವ ಆಮಿಷ ಒಡ್ಡಬಾರದಿತ್ತು.  ಹಾಗೊಂದು ವೇಳೆ ಪಕ್ಷೇತರರು ಕಾಂಗ್ರೆಸ್ ಮತ್ತು ಜೆಡಿಎಸ್ ನತ್ತ ಓಡಿದ್ದರೂ ಅವರೆಲ್ಲ ಸೇರಿ ಸರ್ಕಾರ ರಚಿಸುವುದು ಸಾಧ್ಯವೇ ಇರಲಿಲ್ಲ.ಅಕಸ್ಮಾತ್ ಕಿಚಡಿ ಸರ್ಕಾರ ರಚನೆಯಾಗಿದ್ದರೂ ಅದು ರಾಜ್ಯ ರಾಜಕೀಯ ಇತಿಹಾಸದ ಅತ್ಯಂತ ಅಲ್ಪಾಯುಶಿ ಸರ್ಕಾರವೆಂದು ಇತಿಹಾಸದಲ್ಲಿ ದಾಖಲಾಗುತ್ತಿತ್ತು.ಅಧಿಕಾರಕ್ಕಾಗಿ ತಹತಹಿಸುತ್ತಿದ್ದ ಬಿಜೆಪಿ ಮತ್ತು ಯಡಿಯೂರಪ್ಪನವರ ಆಗಿನ ಮನೋ ಸ್ಥಿತಿಗೆ ಕಾಯುವ ಸಹನೆ ಇರಲಿಲ್ಲವಾದರೂ ಆಗ ದೂರದೃಷ್ಟಿಯ ಸಹನೆ ತೋರಿದ್ದರೆ ಅದರ ಪ್ರತಿಫಲ ಏನೆನ್ನುವುದು ಈಗ ಗೊತ್ತಾಗುತ್ತಿತ್ತು.ಎಲ್ಲ ಪಕ್ಷೇತರರಿಗೆ ಮಣೆ ಹಾಕುವ ತಪ್ಪು ಮಾಡಿದಾಗಲೇ  ತಮ್ಮ ಪತನಕ್ಕೆ ಯಡಿಯೂರಪ್ಪ ಸ್ವತಹ ಅ ಡಿಪಾಯ ಹಾಕಿಕೊಂಡರು. ಸರ್ಕಾರ ರಚಿಸುವ ಸಲುವಾಗಿ ಯಡಿಯೂರಪ್ಪ ಎಲ್ಲ ಪಕ್ಷೆತರರಿಗೆ ಮಣೆ ಹಾಕುವುದು ಅನಿವಾರ್ಯವಾಗಿತ್ತ್ತೆಂದೇ ಇಟ್ಟುಕೊಳ್ಳೋಣ.ಆದರೆ ಒಂದೇ ಸಂಪುಟದಲ್ಲಿ ಕರುಣಾಕರ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಎಂಬ ಸಹೋದರರಿಗೆ ಅವಕಾಶ ನೀಡುವ ತಪ್ಪು ಮಾಡಬಾರದಿತ್ತು.ಚುನಾವಣೆ ಸಂದರ್ಭದಲ್ಲೇ ಟಿಕೆಟ್ ನೀಡುವಾಗ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ನೀಡುವ ಬದಲು ಟಿಕೆಟ್ ಗಳನ್ನೂ ಕೊಟ್ಯಂತರ ರೂಪಾಯಿಗಳಿಗೆ ಗಣಿ ಕಳ್ಳರಿಗೆ,ಭೂಗಳ್ಳರಿಗೆ ಮಾರಾಟ ಮಾಡಿದ ಫಲವಾಗಿ ಪಕ್ಷ ನಿಷ್ಠೆಗಿಂತ ವ್ಯಾಪಾರಿ ಕಾರಣಗಳಿಗಾಗಿ ಪಕ್ಷಕ್ಕೆ ಸೇರ್ಪಡೆಯಾದವರು ಸಹಜವಾಗಿಯೇ ಪ್ರತಿಫಲ ನಿರೀಕ್ಷಿಸಿದರು.ಶಿಸ್ತು ಮತ್ತು ಪ್ರಾಮಾಣಿಕ ರಾಜಕಾರಣದ ಮಾತನಾಡುವ ಬಿಜೆಪಿಗೆ ಅಧಿಕಾರ ವ್ಯಾಮೋಹ ಬಿಟ್ಟರೆ ಇಂಥ ವ್ಯಾಪಾರದ ಅನಿವಾರ್ಯತೆ ಏನೂ ಇರಲಿಲ್ಲ.ಮಂತ್ರಿಗಳ ಆಯ್ಕೆಯಲ್ಲಿ ಇತರ ಪಕ್ಷಗಳಂತೆ ಜಾತಿ,ಧನಬಲಕ್ಕೆ ಮನ್ನಣೆ ನೀಡಿದ ಯಡಿಯೂರಪ್ಪ ಕೆಲವು ಅರ್ಹರಿಗೆ ಮಾತ್ರ  ಅವಕಾಶ ನೀಡಿದರು.ಇವತ್ತು ಮಂತ್ರಿ ಸ್ಥಾನ ಕಳೆದುಕೊಂಡಿರುವ ಶೋಭಾ ಕರಂದ್ಲಾಜೆ ಎಲ್ಲರ ಸಿಂಪತಿ ಗಿಟ್ಟಿಸಿರಬಹುದು,ಮಂತ್ರಿ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿರಬಹುದೆಂಬ ಮೆಚ್ಚುಗೆಯೂ ಅವರಿಗೆ ದೊರೆಯುತ್ತಿರಬಹುದು.ಈಗ ರೆಡ್ಡಿ ಸಹೋದರರ ಕಾರಣಕ್ಕೆ ಶೋಭಾ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ತಪ್ಪೇ ಇರಬಹುದು.ಆದರೆ ಆಗಿನ ಸಂದರ್ಭದಲ್ಲಿ ಪುತ್ತೂರಿನ ಶಕುಂತಲಾ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿಸಿದಾಗಲೇ ಶೋಭಾಗೆ ಮಂತ್ರಿ ಸ್ಥಾನ ನೀಡಲೆಂದೇ ಈ ವಂಚನೆ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿತ್ತು.ಧನ ಕನಕಗಳಿಗಾಗಿ ಕೆಲವರಿಗೆ ಟಿಕೆಟ್ ನೀಡಿದ ಯಡಿಯೂರಪ್ಪ ಶೋಭಾ ಕಾರಣಕ್ಕೆ ಶಕುಂತಲಾ ಶೆಟ್ಟಿ ಅವರಿಗೆ ವಂಚಿಸಿದ್ದು ಪಕ್ಷದ ದೃಷ್ಟಿಯಲ್ಲೂ,ಸಾರ್ವಜನಿಕವಾಗಿಯೂ ಘೋರ ಅಪರಾಧವಾಗಿ ಕಂಡಿತ್ತು.ಪುತ್ತೂರಿನ ಬಳಿ ಇರುವ ಪುಟ್ಟ ಗ್ರಾಮದಿಂದ ಬಂದ ಶೋಭಾ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಗೆಲ್ಲಲು ಬಿಜೆಪಿ ಪರ ಇದ್ದ ಮತದಾರರ ಒಲವು,ಯಡಿಯೂರಪ್ಪನವರ ವರ್ಚಸ್ಸೂ ನೆರವಾಗಿರಬಹುದು.ಇನ್ನೋರ್ವ ಹಿರಿಯ ಸದಸ್ಯೆ ವಿಮಲಾ ಗೌಡ ವಿಧಾನ ಪರಿಷತ್ ಸದಸ್ಯರಾಗಿರುವಾಗಲೇ ಶೋಭಾಗೆ ಮಂತ್ರಿ ಸ್ಥಾನ ಕೊಟ್ಟಿದ್ದು ಕೆಲವರ ಕೆಂಗಣ್ಣಿಗೆ ಕಾರಣವಾಯಿತು.ಯಡಿಯೂರಪ್ಪ ಮತ್ತು ಶೋಭಾ ನಡುವಿನ ಆತ್ಮೀಯತೆಯೇ ಇದಕ್ಕೆಲ್ಲ ಕಾರಣ ಎಂಬ ಸಲ್ಲದ ಕತೆಗಳು ಹುಟ್ಟಿಕೊಳ್ಳಲು ಸ್ವತಹ ಯಡಿಯೂರಪ್ಪನವರೇ ಕಾರಣರಾದರು. ಯಡಿಯೂರಪ್ಪನವರು ಪಕ್ಷಕ್ಕೆ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಟಿಕೆಟ್ ಕೊಟ್ಟರೇ,ಹಣ ಕೊಟ್ಟವರಿಗೆ ಟಿಕೆಟ್ ಕೊಟ್ಟರೇ,ಅಥವಾ ಅರ್ಹರಿಗೆ ಅವಕಾಶ ನೀಡಿದರೇ,ಅಥವ ವೈಯಕ್ತಿಕ ಸಂಬಂಧಗಳಿಗಾಗಿ  ಮಣೆ ಹಾಕಿದರೇ? ಟಿಕೆಟ್ ಮತ್ತು ಮಂತ್ರಿ ಸ್ಥಾನ ನೀಡುವಲ್ಲಿ ಯಡಿಯೂರಪ್ಪ(ಮತ್ತು ಪಕ್ಷ) ಯಾವುದೇ ಮಾನದಂಡ ಅನುಸರಿಸದಿದ್ದುದೂ ತಿರುಗೇಟು ನೀಡಿತು.
ಆನಂತರವಾದರೂ ಆಗಿದ್ದೇನು?ಪದ್ಮಪ್ರಿಯ ನಿಗೂಢ ಸಾವಿನ ಪ್ರಕರಣದಲ್ಲಿ ಸ್ವತಹ ಗೃಹ ಸಚಿವ ವಿ.ಎಸ್.ಆಚಾರ್ಯರೇ ಉಡುಪಿ ಶಾಸಕನ ಆಪ್ತ ಸಹಾಯಕನಂತೆ ವರ್ತಿಸಿ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟರು.ಆಚಾರ್ಯ ಗೃಹ ಸಚಿವರಾಗಿದ್ದಾರೆ ತಾವು ಹೇಳಿದಂತೆ ಕೇಳಿಕೊಂಡಿರುತ್ತಾರೆ ಎಂಬ ಕಾರಣದಿಂದಲೋ ಏನೋ ಆಚಾರ್ಯ ಕಾರ್ಯವೈಖರಿ ಬಗ್ಗೆ ಯಡಿಯೂರಪ್ಪ ಅತೃಪ್ತಿ ವ್ಯಕ್ತಪಡಿಸಲಿಲ್ಲ,ಆನಂತರವೂ ಆಚಾರ್ಯ ಅದಕ್ಷ ಎಂದು ಸಾಬೀತಾಗುತ್ತಿದ್ದರೂ ಅವರನ್ನು ಬದಲಿಸುವ ಗೋಜಿಗೆ ಹೋಗಲಿಲ್ಲ.ಅಷ್ಟೇ ಅಲ್ಲ.ಬಹುತೇಕ ಸಚಿವರು ನಿಷ್ಕ್ರಿಯರೂ,ಅದಕ್ಷರೂ,ಭ್ರಷ್ಟರೂ ಆಗಿದ್ದರೂ ಸಂಪುಟ ಪುನರ್ರಚನೆಗೆ ಮುಂದಾಗಲಿಲ್ಲ.ಅಷ್ಟೋ ಇಷ್ಟೋ ಪ್ರಾಮಾಣಿಕವಾಗಿ,ಕ್ರಿಯಾಷೆಳರಾಗಿ,ದಕ್ಷರಾಗಿದ್ದವರಿಗೆ ಯಡಿಯೂರಪ್ಪ ಸಂಪೂರ್ಣ ಸ್ವಾತಂತ್ರ್ಯವನ್ನ್ನೂ ನೀಡಿರಲಿಲ್ಲ.ಹೇಗಾದರೂ ಅಧಿಕಾರ ಉಳಿಸಿಕೊಳ್ಳಲೇ ಬೇಕೆಂದು ಅನಗತ್ಯವಾಗಿ ಆಪರೇಷನ್ ಕಮಲಕ್ಕೆ ಕೈ ಹಾಕಿ ಬೇರೆ ಪಕ್ಷದಲ್ಲಿದ್ದವರನ್ನೆಲ್ಲ ಕರೆತಂದು ಮಂತ್ರಿ ಸ್ಥಾನ ನೀಡಿದಾಗಲೇ ಯಡಿಯೂರಪ್ಪನವರ ಅವನತಿಯ ಇನ್ನೊಂದು ಅಧ್ಯಾಯ ಆರಂಭವಾಯಿತು.ಪಕ್ಷದಲ್ಲಿರುವವರನ್ನು ನಿರ್ಲಕ್ಷಿಸಿ ಇತರರಿಗೆ ಮಣೆ ಹಾಕಿದ್ದು ಭಿನ್ನಮತದ ಅಪಸ್ವರ ಗಟ್ಟಿಯಾಗಲು ನೆರವಾಯಿತು.ಯಡಿಯೂರಪ್ಪನವರು ಕೇವಲ ಅಧಿಕಾರ,ಜಾತಿ ಬಲ,ಧನಬಲದಿಂದಲೇ ಶಾಶ್ವತವಾಗಿ ಅಧಿಕಾರದಲ್ಲಿ ಇರಬಹುದೆಂಬ ಭ್ರಮೆಗೆ ಒಳಗಾದರು.ಈ ಕಾರಣದಿಂದಲೋ ಏನೋ ಅವರು ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ,ಅವರೊಂದಿಗೆ ಪ್ರೀತಿಯಿಂದ ಬೆರೆಯಲಿಲ್ಲ,ಶಾಸಕರು ಕೋರಿದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕೊಡಲೂ ಮುಂದಾಗಲಿಲ್ಲ.ಈ ಕಾರಣದಿಂದ ಅನೇಕ ಶಾಸಕರು ಮುನಿಸಿಕೊಂಡು ಸಂದರ್ಭಕ್ಕಾಗಿ ಕಾಯತೊಡಗಿದರು.ಯಡಿಯೂರಪ್ಪನವರು ಶಾಸಕರನ್ನು ಜತೆಗಿರಿಸಿಕೊಂಡಿದ್ದರೆ ಇವತ್ತು ಅವರು ರೆಡ್ಡಿಗಳಿಗಾಗಿ ಹೆದರಲೆಬೇಕಿರಲಿಲ್ಲ.ಯಡಿಯೂರಪ್ಪನವರು ಪ್ರವಾಹ ಸಂತ್ರಸ್ತರಿಗೆ ವಸತಿ ಒದಗಿಸುವ ಕಾರ್ಯವನ್ನು ಸಹಜವಾಗಿಯೇ ಕಂದಾಯ ಸಚಿವ ಕರುಣಾಕರ ರೆಡ್ಡಿಗೆ ವಹಿಸಬೇಕಿತ್ತು.ಅದರ ಬದಲು ವಸತಿ ನಿರ್ಮಾಣದ ನೇತೃತ್ವವನ್ನು ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ವಹಿಸಿದಾಗ ಅದಕ್ಕೆ ಸಕಾರಣಗಳನ್ನು ನೀಡಬೇಕಿತ್ತು.ಪ್ರವಾಹ ಪರಿಹಾರ ಕಾರ್ಯಗಳಿಗೆ ಹಣದ ಅಗತ್ಯ ಕಂಡು ಬಂದಾಗ ಅದಿರು ಸಾಗಿಸುವ ಲಾರಿಗಳಿಗೆ ಸುಂಕ ವಿಧಿಸುವ ನಿರ್ಧಾರ ಕೈಗೊಳ್ಳುವಾಗ ಅದನ್ನು ಎದುರಿಸುವ ಶಕ್ತಿ ತಮಗಿದೆಯೇ ಎಂದು ಲೆಕ್ಕ ಹಾಕಬೇಕಿತ್ತು.ರೆಡ್ಡಿಗಳು ಪ್ರತ್ಯೇಕವಾಗಿ ಸಂತ್ರಸ್ತರಿಗೆ ವಸತಿ ನಿರ್ಮಾಣ ಕಾರ್ಯ ಕೈಗೊಂಡು ಸರ್ಕಾರಕ್ಕೆ ಇರುಸುಮುರುಸು ಉಂಟು ಮಾಡಿದಾಗ ಅದನ್ನು ಬಗೆಹರಿಸುವ ಪ್ರಯತ್ನಗಳ ಬಗ್ಗೆ ಚಿಂತನೆ ನಡೆಸಬೇಕಿತ್ತು.ಅದು ಬಿಟ್ಟು ರೆಡ್ಡಿ ಸಹೋದರರು ಮತ್ತು ಅವರ ಗೆಳೆಯ ಶ್ರೀರಾಮುಲು ಉಸ್ತುವಾರಿಯ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ವರ್ಗಾ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದರು.ರೆಡ್ಡಿಗಳ ಬಂಡಾಯ ಜೋರಾಗಿ ಅವರು ಮುಖ್ಯಮಂತ್ರಿಯನ್ನು ಬದಲಿಸಬೇಕು,ಶೋಭಾರನ್ನು ಸಂಪುಟದಿಂದ ಕೈಬಿಡಬೇಕು,ತಮ್ಮ ಜಿಲ್ಲೆಗಳಿಂದ ವರ್ಗಾವಣೆ ಮಾಡಿರುವ ಅಧಿಕಾರಿಗಳನ್ನು ಮೊದಲಿದ್ದಲ್ಲಿಗೆ ವರ್ಗಾಯಿಸಬೇಕೆಂದು ಪಕ್ಷದ ವರಿಷ್ಟರಲ್ಲಿ ಒತ್ತಾಯಿಸಿದಾಗ ಯಡಿಯೂರಪ್ಪನವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಬೇಕಿತ್ತು.ನಾಯಕನಾದವನು ಯಾವುದೇ ನಿರ್ಧಾರ ಕೈಗೊಳ್ಳಬೇಕಾದ ಸಂದರ್ಭದಲ್ಲಿ ತೋರಿದ ತಾಖತ್ತನ್ನೇ ಈಗಲೂ ತೋರಬೇಕಿತ್ತು.ಬಂಡಾಯಕ್ಕೆ ಕಾರಣರಾದ ಮಂತ್ರಿಗಳು ಕೈಗೊಂಡ ಜನ ವಿರೋಧಿ ನಿಲುವುಗಳನ್ನು ಮತದಾರರಿಗೆ ಮನವರಿಕೆ ಮಾಡಿ ಮೂವರೂ ಮಂತ್ರಿಗಳನ್ನು ಸಂಪುಟದಿಂದ ವಜಾ ಮಾಡಿದ್ದರೆ ಉಳಿದ ಚಿಲ್ಲರೆ ಪಲ್ಲರೆ ಬಂಡುಕೊರರೂ ಯಡಿಯೂರಪ್ಪನವರ ಕಾಲಿಗೆ ಬೀಳುತ್ತಿದ್ದರು.ಅಷ್ಟೇ ಅಲ್ಲ.ನಿಷ್ಕಾರಣವಾಗಿ ಶೋಭಾರನ್ನು ಕೈಬಿಡುವುದಿಲ್ಲ ಎಂದು ಹಠ ಹಿಡಿಯಬೇಕಿತ್ತು,ವರ್ಗಾವಣೆ ಮಾಡಿದ ಅಧಿಕಾರಿಗಳನ್ನು ಸಧ್ಯಕ್ಕೆ ಮತ್ತೆ ವರ್ಗಾವಣೆ ಮಾಡುವುದು ಸಾಧ್ಯವೇ ಇಲ್ಲವೆಂದು ಘೋಷಿಸಬೇಕಿತ್ತು.ಇಷ್ಟಕ್ಕೂ ಮೀರಿ ರೆಡ್ಡಿ ಸಹೋದರರೇ  ಮೇಲುಗೈ ಸಾಧಿಸಿ ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡಿದ್ದರೆ ಅವರು  ಜನಮಾನಸದಲ್ಲಿ ನಿಜವಾದ ಹೀರೋ ಆಗಿ ಕಂಗೊಳಿಸುತ್ತಿದ್ದರು.ಶೋಭಾ ಅವರನ್ನು ಕೈ ಬಿಡಲೇ ಬೇಕಾದ ಸಂ ದರ್ಭದಲ್ಲಿ ಅವರು ಸಾರ್ವಜನಿಕವಾಗಿ ಕಣ್ಣೀರು ಹಾಕಿದಾಗಲೇ ಅವರೊಬ್ಬ ಹೇಡಿಯೆಂದೂ,ನಾಯಕನಲ್ಲವೆಂದೂ,ನಂಬಿದವರನ್ನೂ ನಡುನೀರಿನಲ್ಲಿ ಕೈಬಿಡುವ ಸ್ವಾರ್ಥಿಯೆಂದೂ ಸಾಬೀತಾಯಿತು.      ಆದರೆ ಅವರು ಕೇವಲ ಅಧಿಕಾರ (ಸಮನ್ವಯ ಸಮಿತಿ ರಚನೆಯಾದ ನಂತರ ಅವರು ನಾಮಕಾವಾಸ್ತೆ ಸಿಎಂ ಆಗಲಿದ್ದಾರೆ) ಉಳಿಸಿಕೊಳ್ಳುವ ಸಲುವಾಗಿ ಕೈಗೊಂಡ ಆತುರದ ತೀರ್ಮಾನಗಳಿಂದ ಅವರು ಅಧಿಕಾರಶಾಹಿಯ ಮೇಲೂ ಹಿಡಿತ ಕಳೆದುಕೊಂಡಿದ್ದಾರೆ,ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಬೆಂಬಲವನ್ನೂ ಕಳೆದುಕೊಂಡಿದ್ದಾರೆ,ಮತದಾರರನ್ನೂ ದೂರ ಮಾಡಿಕೊಂಡಿದ್ದಾರೆ.ಒಳ್ಳೆ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುವ ಸದಾವಕಾಶವನ್ನೂ ಕಳೆದುಕೊಂಡು ಬರಲಿರುವ ಏಕಾಂತದ ದಿನಗಳಿಗೆ ತಮಗೇ ಗೊತ್ತೀಲ್ಲದಂತೆ ಯಡಿಯೂರಪ್ಪನವರು ಕಾಯುತ್ತಿದ್ದಾರೆ. ಹೀಗೆ  ಹೆಣ್ಣು , ಹೊನ್ನು,ಮಣ್ಣು ಯಡಿಯೂರಪ್ಪನವರನ್ನು ಅಲುಗಾಡಿಸುವ ಕಾಯಕದಲ್ಲಿ ಪ್ರಮುಖ ಪಾತ್ರ ವಹಿಸಿದವು.ಮುಖ್ಯಮಂತ್ರಿಯೇ ಆಗಲಿ ಭಿನ್ನಮತೀಯರೇ ಆಗಲಿ ಜನರಿಗಾಗಿ,ಜನಹಿತಕ್ಕಾಗಿ ಕಿತ್ತಾಡದೇ ಕೇವಲ ಸ್ವಾರ್ಥಕ್ಕೆ ಜಗಳ ಮಾಡಿಕೊಂಡರೆನ್ನುವುದೂ ಜಗಜ್ಜಾಹೀರಾಯಿತು.

1 ಕಾಮೆಂಟ್‌:

Powered By Blogger

ಬೆಂಬಲಿಗರು

renukacharya avarannu mantri maadiddu sariye?