ಗುರುವಾರ, ಡಿಸೆಂಬರ್ 31, 2009

ವರ್ಷದ ವ್ಯಕ್ತಿ- 2oo9

೧.ವರ್ಷದ ವ್ಯಕ್ತಿ : ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
೨.ವರ್ಷದ ಮಹಿಳೆ :ಶೋಭಾ ಕರಂದ್ಲಾಜೆ
೩.ವರ್ಷದ ಹೇಡಿ ರಾಜಕಾರಣಿ; ಬೂಸಿ ಯಡಿಯೂರಪ್ಪ
೪.ವರ್ಷದ ಸಭ್ಯ ರಾಜಕಾರಣಿ; ಎಸ್.ಸುರೇಶ್ ಕುಮಾರ್
೫.ವರ್ಷದ ನಿರ್ಲಜ್ಜ: ರೇಣುಕಾಚಾರ್ಯ
೬.ವರ್ಷದ ಖಳ ನಾಯಕ:ಜನಾರ್ದನ ರೆಡ್ಡಿ
೭.ವರ್ಷದ ಫ್ಲಾಪ್ ಷೋ : ಬಿಜೆಪಿ ಸರ್ಕಾರ
೮.ವರ್ಷದ ರಾಜಕೀಯ ವಿಶ್ಲೇಷಕ :ಮಹದೇವ್ ಪ್ರಕಾಶ್
೯.ವರ್ಷದ ಪತ್ರಕರ್ತ: ದಿನೇಶ್ ಅಮೀನ್ ಮಟ್ಟೂ
೧೦.ವರ್ಷದ ರಾಜಕಾರಣಿ: ವಿ.ಎಸ್.ಉಗ್ರಪ್ಪ

ಹೊಸ ವರ್ಷದ ಶುಭಾಶಯಗಳು

ನಾಡಿನ ಎಲ್ಲರ ಬದುಕಲ್ಲಿ ಸುಖ,ಶಾಂತಿ,ನೆಮ್ಮದಿ,ಸಮೃದ್ಧಿ ನೆಲಸಲಿ.ಎಲ್ಲರ ಕನಸು,ಆಸೆ,ಆಕಾಂಕ್ಷೆಗಳು ಈಡೇರಲಿ.ಎಲ್ಲರ ಬದುಕು ಬಂಗಾರವಾಗಲಿ ಎನ್ನುವುದೇ 'ಟೀಕೆ ಟಿಪ್ಪಣಿಯ' ಹರಕೆ;ಹಾರೈಕೆ.

ರಾಮ್ಬೋ


Posted by Picasaನನ್ನ ಪ್ರೀತಿಯ ರಾಮ್ಬೋ ಕಣ್ಮರೆಯಾಗಿ ಜನವರಿ ೧೪ಕ್ಕೆ ೧೭ ವರ್ಷಗಳಾಗುತ್ತಿದೆ.ಸುಮಾರು ೧೦ ವರ್ಷಗಳ ಕಾಲ ನನ್ನ ಮಗುವಿನಂತೆ,ಗೆಳೆಯನಂತೆ ಬದುಕಿನ ಪ್ರಮುಖ ಭಾಗವಾಗಿದ್ದ ಆತನ ನೆನಪು ಸದಾ ಕಾಡುತ್ತದೆ.

ಗುರುವಾರ, ಡಿಸೆಂಬರ್ 24, 2009

ಮಂತ್ರಿಗಳ ಆಯ್ಕೆ ಮತ್ತು ಅನೈತಿಕ ರಾಜಕಾರಣ

ಬೂ.ಸಿ.ಯಡಿಯೂರಪ್ಪ ಎಂಬ ನಿರ್ಲಜ್ಜ,ಅದಕ್ಷ,ಅಪ್ರಾಮಾಣಿಕ,ಹೊಣೆಗೇಡಿ ಮುಖ್ಯಮಂತ್ರಿಯ ಆಡಳಿತದಲ್ಲಿ ಬೇಕಾಬಿಟ್ಟಿ ಮನರಂಜನೆ ದೊರೆಯುತ್ತಿದೆ.ಅಧಿವೇಶನ,ಸಂಪುಟ ಸಭೆ,ಜನಪರ ಕಾರ್ಯಕ್ರಮಗಳಿಗಿಂತ ಸಚಿವ ಸಂಪುಟ ವಿಸ್ತರಣೆಗೆ ಮಾಜಿ ಹೋರಾಟಗಾರ,ಮಾಜಿ ಮನುಷ್ಯ,ಮಾಜಿ ನಾಯಕ ಯಡಿಯೂರಿ ಅಡಿಯೂರಲಾಗದ ಅಂಡು ಸುಟ್ಟ ಬೆಕ್ಕಿನಂತೆ ಅಧಿಕಾರ ಉಳಿಸಿಕೊಳ್ಳುವ ಮುಲಾಮಿಗಾಗಿ ಹುಡುಕುವ ಕಸುಬನ್ನು ನಿತ್ಯ ನಿರಂತರವಾಗಿಸಿಕೊಂಡಿದ್ದಾರೆ.ಅವರ ಬೇಜವಾಬ್ದಾರಿ ನಾಯಕತ್ವದಲ್ಲಿ ಪುಂಡು ಪೋಕರಿಗಳೆಲ್ಲ ಮಂತ್ರಿಗಳಾಗುವ ಸೌಭಾಗ್ಯ ಪಡೆಯುತ್ತಿದ್ದಾರೆ.

ನಿಜಕ್ಕೂ ಮಂತ್ರಿಗಳ ಆಯ್ಕೆ ಹೇಗೆ ನಡೆಯಬೇಕು?ನಮ್ಮ ನಾಡಿಗೆ ಎಂಥ ಮಂತ್ರಿಗಳು ಬೇಕು?ಸಂವಿಧಾನದ ನಿಯಮಾನುಸಾರ ಮಂತ್ರಿಗಳ ಆಯ್ಕೆ ನಡೆಯಬೇಕು.ಅಪರಾಧಗಳ ಹಿನ್ನೆಲೆ  ಇರುವವರು ಮಂತ್ರಿ ಸ್ಥಾನ ಪಡೆಯಲೇ ಬಾರದು. ಆದರೆ ಅಪರಾಧ ಹಿನ್ನೆಲೆ ಇಲ್ಲಾ ಎಂದಾಕ್ಷಣ ಎಲ್ಲರೂ ಮಂತ್ರಿಯಾಗಲು ಅರ್ಹರೆಂದು ಅರ್ಥವಲ್ಲ.ಪ್ರಾಮಾಣಿಕತೆ ,ದಕ್ಷತೆ ,ಕ್ರಿಯಾಶೀಲತೆ ,ದೂರದೃಷ್ಟಿ,ದಿಟ್ಟತನ ಇರುವ ಸರಳಸಜ್ಜನಿಕೆಯ ವ್ಯಕ್ತಿಗಳೇ ಮಂತ್ರಿಗಳಾಗಬೇಕು.ಮಂತ್ರಿಗಳನ್ನು  ಜಾತಿಬಲ,ಹಣಬಲ ಸೇರಿದಂತೆ ಎಲ್ಲ ಪ್ರಭಾವಗಳನ್ನು ಮೀರಿ ಆಯ್ಕೆ ಮಾಡಬೇಕು.ಈ ಮೊದಲು ನಾನು ಸೂಚಿಸಿದ ಗುಣ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ಆಯ್ಕೆಗೆ ಮನ್ನಣೆ ದೊರೆಯಬೇಕು.ಈ ನೆಲದಲ್ಲಿ  ಸುಖ,ಶಾಂತಿ, ನೆಮ್ಮದಿ,ಸಮೃದ್ಧಿ ಜತೆ ಸುಂದರ ಕನಸುಗಳನ್ನೂ ಕಾಣುವ ವಾತಾವರಣ ರೂಪಿಸುವ ಸಾಮರ್ಥ್ಯ ಇರುವವರಿಗೆ ಇಂಥ ಅವಕಾಶ ದೊರೆಯಬೇಕು.ಮಾತಿನ ಜಾಣ್ಮೆ ಇರುವವರೆಲ್ಲ ಅರ್ಹರಲ್ಲ,ಓಲೈಸುವ  ಗುಣ ಇರುವವರೆಲ್ಲ ನಾಯಕರಲ್ಲ ಎನ್ನುವ ಸ್ಪಷ್ಟ ಅರಿವು ಮುಖ್ಯಮಂತ್ರಿಗೆ ಇರಬೇಕು. ಇಲ್ಲದಿದ್ದರೆ ಆತ ಅನಾಯಕತ್ವದ ಅಪ್ಪಟ ಉದಾಹರಣೆಯಾಗಿ ಕಸದ ಬುಟ್ಟಿ ಸೇರುತ್ತಾನೆ. ಮಂತ್ರಿ ಸ್ಥಾನಕ್ಕೆ ಎಲ್ಲ ಅರ್ಹತೆಗಳಿರುವ ವ್ಯಕ್ತಿಗಳು ಒಂದೇ ಜಾತಿಗೆ ಸೇರಿದವರಾಗಿದ್ದರೂ ತಪ್ಪೇನಲ್ಲ.ಎಲ್ಲ ಮಂತ್ರಿಗಳು ದಲಿತ,ಒಕ್ಕಲಿಗ,ಲಿಂಗಾಯತ,ಕುರುಬ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದರೂ ಅಥವಾ ಯಾವುದೊ ಹಿಂದುಳಿದ ಅತಿ ಸಣ್ಣ ಜಾತಿಗೆ ಸೇರಿದ್ದರೂ ಅದರಲ್ಲಿ ತಪ್ಪೇನಿಲ್ಲ.ಆದರೆ ಕೇವಲ ಜಾತಿ ಅಥವಾ ಕೋಮು ಅಥವಾ ಧನಬಲ ಅಥವಾ ಮತಾಧೀಷರ ಪ್ರಭಾವ ಅಥವಾ ಸ್ನಾಯುಬಲ ಇರುವ ಕಾರಣದಿಂದಲೇ ಯಾರನ್ನೇ ಮಂತ್ರಿಯಾಗಿಸುವುದು ತಪ್ಪಷ್ಟೇ ಅಲ್ಲ,ನಾಡಿನ ಜನತೆಗೆ ಬಗೆಯುವ ದ್ರೋಹವಾಗುತ್ತದೆ.ಪ್ರಬಲ,ಪ್ರಭಾವಿ,ದಲಿತ ಮತ್ತು ಅಲ್ಪಸಂಖ್ಯಾತರನ್ನು ಕೇವಲ ಓಟಿಗಾಗಿ ಓಲೈಸುವ ಸಲುವಾಗಿ ನಿಷ್ಕ್ರಿಯರು,ಮುಖಹೀನರು,ಅಪ್ರಾಮಾಣಿಕರು,ಅದಕ್ಷರು,ಭ್ರಷ್ಟರಿಗೆ ಮಣೆ ಹಾಕುವುದರಿಂದ ನಾಡಿನ ಜನರ ಕನಸುಗಳಷ್ಟೇ ಭಗ್ನಗೊಳ್ಳುವುದಿಲ್ಲ,ನಾಡನ್ನು ಶಿಲಾಯುಗಕ್ಕೆ ವಾಪಸು ಕರೆದೊಯ್ಯುವ ಅಪರಾಧವನ್ನೂ ಮಾಡಿದಂತಾಗುತ್ತದೆ.

ಈಗ ಆಗುತ್ತಿರುವುದೂ ಅದೇ. ಮಂತ್ರಿಗಳ ಆಯ್ಕೆಗೆ ಯಡಿಯೂರಪ್ಪನವರು ಅನುಸರಿಸಿರುವ ಮಾನದಂಡವಾದರೂ ಏನು? ಬಿಜೆಪಿ ಸರ್ಕಾರದ ಮಂತ್ರಿಮಂಡಲದಲ್ಲಿ ಪ್ರಬಲ ಜಾತಿಗೆ ಸೇರಿದ ಕಾರಣ ಲಿಂಗಾಯತರಿದ್ದಾರೆ,ಒಕ್ಕಲಿಗರಿದ್ದಾರೆ.ಪ್ರಭಾವಿ ಜಾತಿಗೆ ಸೇರಿದ ಬ್ರಾಹ್ಮಣರಿದ್ದಾರೆ,ಸಾಂವಿಧಾನಿಕ ರಕ್ಷಣೆ ಪಡೆದ ಕಾರಣ ದಲಿತರೂ ಇದ್ದಾರೆ,ತೋರಿಕೆಯ ಧರ್ಮ ಸಮನ್ವಯತೆಗಾಗಿ ಓರ್ವ ಮುಸ್ಲಿಮರಿಗೂ ಅವಕಾಶ ನೀಡಲಾಗಿದೆ.ಆದರೆ ವೋಟಿನ ಲೆಕ್ಕಾಚಾರದಲ್ಲಿ ಒಂದಿಷ್ಟೂ ನೆರವಾಗಲು ಸಾಧ್ಯವಾಗದ ಅತ್ಯಂತ ಸಣ್ಣ ಜಾತಿಗೆ ಸೇರಿದ ಒಬ್ಬರಾದರೂ ಸ್ಥಾನ ಪಡೆದಿದ್ದಾರೆಯೇ? ಖಂಡಿತ ಇಲ್ಲಾ! ಅದೇನೇ ಇರಲಿ,ಮಂತ್ರಿಗಳಾದವರಲ್ಲಿ ಎಷ್ಟು ಮಂದಿ ಗಟ್ಟಿಗರಿದ್ದಾರೆ? ಒಂದೊಂದು ಸಂಪುಟದಲ್ಲೂ ಮಹತ್ಸಾಧನೆ ಮಾಡಿದ ಗಟ್ಟಿಗರಿರುತ್ತಿದ್ದರು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬೋರ್ವೆಲ್ ತೋಡಿಸಿ ನೀರು ಸಾಬರೆಂದು ಹೆಸರು ಮಾಡಿದ ನಜೀರ್ ಸಾಬ್ ,ಹಸಿರು ಕಂಗೊಳಿಸುವಂತೆ ಮಾಡಿದ ಅರಣ್ಯ ಸಚಿವ ಜೀವಿಜಯರಂಥ ಅದೆಷ್ಟೋ ಮಂತ್ರಿಗಳಿದ್ದರು.ಹೆಗಡೆ ಅವಧಿಯಲ್ಲಿ ಮಂತ್ರಿಗಳೆಲ್ಲ ಸ್ವಾತಂತ್ರ್ಯದ ಖುಷಿ ಅನುಭವಿಸಿದ್ದರು.ಸಿದ್ದರಾಮಯ್ಯ ,ರಾಜಶೇಖರ ಮೂರ್ತಿ,ವೈ.ಕೆ.ರಾಮಯ್ಯ,ಮಾಲಕರೆಡ್ಡಿ,.......ಹೀಗೆ ಒಬ್ಬೊಬ್ಬರೂ ವಿಭಿನ್ನ ಕಾಲಘಟ್ಟಗಳಲ್ಲಿ ಮಂತ್ರಿಗಳಾಗಿ ಹೆಸರು ಮಾಡಿದ್ದಾರೆ.ಹಿಂದಿನ ಎಲ್ಲ ಸರ್ಕಾರಗಳಿಗಿಂತ ಭಿನ್ನ ಆಡಳಿತ ನೀಡುವುದಾಗಿ ಹೇಳಿ ಅಧಿಕಾ ರಕ್ಕೆ ಬಂದ ಬಿಜೆಪಿಯಲ್ಲಿ ಪರಿಶುದ್ಧರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರಬೇಕಿತ್ತು.ಆದರೆ ಹಾಗಾಗಿದೆಯೇ? ಖಂಡಿತ ಇಲ್ಲಾ.ಯಡಿಯೂರಪ್ಪನವರ ಸಂಪುಟದಲ್ಲಿ ಸರಳತೆ,ಸಜ್ಜನಿಕೆ ಉಳಿಸಿಕೊಂಡು ಜನರ ನಡುವೆಯೇ ರಾಜಕಾರಣ ಮಾಡುತ್ತಿರುವ ಸುರೇಶ್ ಕುಮಾರ್ ಇರಬಹುದು,ಕೆಲವು ತಪ್ಪುಗಳ ನಡುವೆಯೂ ಭ್ರಷ್ಟರಾಗದ ಕಾಗೇರಿ ಇರಬಹುದು,ಗ್ರಾಮೀಣ ಮುಗ್ಧತೆ ಕಳೆದುಕೊಳ್ಳದ ಬೆಳಮಗಿ ಇರಬಹುದು,ಕನಸುಗಳಿರುವ ಅರವಿಂದ ಲಿಂಬಾವಳಿ ಇರಬಹುದು.ಉಳಿದವರು? ವಿ.ಎಸ್.ಆಚಾರ್ಯ ಸಭ್ಯರಂತೆ ಕಾಣುತ್ತಾರೆ.ಆದರೆ ಗೃಹ ಸಚಿವರಾಗಿ ವೈಫಲ್ಯಗಳ ಮೂಟೆಯೇ ಅವರ ಬೆನ್ನ ಮೇಲಿದೆ.ಅವರು ಸೂಪರ್ ಫ್ಲಾಪ್ ಎನ್ನುವುದಕ್ಕೆ ಸರ್ಕಾರ ರಚನೆಯಾದ ಆರಂಭದಲ್ಲೇ ನಡೆದ ಪದ್ಮಪ್ರಿಯ ನಿಗೂಢ ಸಾವಿನ ಪ್ರಕರಣದಲ್ಲಿ ಆಚಾರ್ಯರು ನಡೆದುಕೊಂಡ ರೀತಿಯೇ ಅವರು ದಿಟ್ಟರೂ ಅಲ್ಲ , ನಿಷ್ಪ್ರಯೋಜಕರ ಗುರು ಎನ್ನುವುದನ್ನೂ ಸಾಬೀತುಪಡಿಸಿಬಿಟ್ಟರು. ನಾವು ಮಾಡಿದ್ದೆ ಸರಿ ಎನ್ನುವ ಮುಖ್ಯಮಂತ್ರಿಗೆ ತಕ್ಕಂತೆ ಅವರ ಹೆಸರಿನ ಮುಂದಿರುವ ಇನಿಶಿಯಲ್ಸ್ we. yes. ಕೂಡಾ ಅದನ್ನೇ ಹೇಳುತ್ತದೆ.ಮುಸ್ಲಿಮರಿಗೊಂದು ಸ್ಥಾನ ಕೊಡಬೇಕು ಅನ್ನುವುದಕ್ಕಾಗಿ ಮುಮತಾಜ್ ಅಲಿ ಖಾನ್ ಅವರನ್ನು ಮಂತ್ರಿ ಮಾಡಿದ್ದಾರೆಂದೂ ಅನ್ನಿಸುವುದಿಲ್ಲ.ಮುಸ್ಲಿಂ ಹೆಸರಿನ ಹಿಂದೂ ಒಬ್ಬರನ್ನು ಮಂತ್ರಿ ಮಾಡಿದಂತೆ ಮುಮತಾಜ್ ವರ್ತಿಸುತ್ತಿದ್ದಾರೆ.ಸಂಘ ಪರಿವಾರವನ್ನು,ಯಡಿಯೂರಪ್ಪನವರನ್ನು ಒಲೈಸುವುದೇ ಮಂತ್ರಿಯ ಕೆಲಸ ಎಂದು  ಅವರು ಭಾವಿಸಿದಂತಿದೆ.ಸಂಘ ಪರಿವಾರದ ಚಿಂತನೆಗಳಿಗೆ ಹೊಂದಿಕೊಂಡು ಹೋಗುವುದೇ ನಿಜವಾದ ಮುಸ್ಲಿಮನ ಲಕ್ಷಣ ಎಂಬಂತೆ ಅವರು ನಟಿಸುತ್ತಿದ್ದಾರೆ.ಉದ್ದೇಶಿತ ಗೋ ಹತ್ಯೆ ನಿಷೇಧ ಕಾಯ್ದೆ,ಬಾಬ್ರಿ ಮಸೀದಿ ನೆಲಸಮ,ಬಾಬಾಬುಡನಗಿರಿ ವಿವಾದದ ಬಗ್ಗೆಯಾಗಲೀ ಅವರು ಅಪ್ಪಿ ತಪ್ಪಿ ತುಟಿ ತೆರೆಯುವುದಿಲ್ಲ.ಸಾಹಿತ್ಯ ಕ್ಷೇತ್ರದಲ್ಲಿ ನಿಸ್ಸಾರ್ ಅಹ್ಮದ್ (ಬೆಣ್ಣೆ ಕದ್ದ ನಮ್ಮ ಕೃಷ್ಣ ಖ್ಯಾತಿಯ) ಇದ್ದಂತೆ ರಾಜಕೀಯದಲ್ಲಿ ಮುಮತಾಜ್ ಅಲಿ ಖಾನ್!

ಇನ್ನು ಭ್ರಷ್ಟಾಚಾರ,ವಿವಾದಗಳ ವಿಚಾರದಲ್ಲಿ ಜನಾರ್ದನರೆಡ್ಡಿಯದಂತೂ ಲೋಡುಗಟ್ಟಲೆ ಸಂಗತಿಗಳಿವೆ.ಅದಿರಲಿ.ಸ್ವಂತ ಅಣ್ಣ ತಮ್ಮಂದಿರಾದ ಜನಾರ್ದನ ಮತ್ತು  ಕರುಣಾಕರ ಇಬ್ಬರನ್ನೂ ಮಂತ್ರಿ ಮಾಡುವ ಅಗತ್ಯವಾದರೂ ಏನಿತ್ತು?ಕಾಂಚಾಣ ಬಿಟ್ಟರೆ ಅವರಲ್ಲಿ ಮಂತ್ರಿಯಾಗಲೆಬೇಕಾದ ಅಂಥ ವಿಶೇಷ ಅರ್ಹತೆಯಾದರೂ ಏನಿತ್ತು? ಸುಧಾಕರ್ ಎಂಬ ಬ್ಯಾಂಕ್ ಕರ್ಮಕಾಂಡದ ಮನುಷ್ಯ,ಈ ಮೊದಲು ಮಂತ್ರಿಯಾಗಿದ್ದ ಕೃಷ್ಣಯ್ಯ ಶೆಟ್ಟಿ ಎಂಬಾತನ ಹಗರಣ..... ಒಂದೇ ಎರಡೇ?ಇನ್ನು ನಿಷ್ಪ್ರಯೋಜಕರು,ಅದಕ್ಷರಂತೂ ಹೇಳುವುದೇ ಬೇಡ,ಅನೇಕ ಸಚಿವರು ಈ ಸ್ಥಾನಕ್ಕಾಗಿ ಸ್ಪರ್ಧೆ ನಡೆಸುತ್ತಿದ್ದಾರೆ.ಹಾಗೆ ನೋಡಿದರೆ ಯಡಿಯೂರಪ್ಪನವರಿಗೆ ಆಪ್ತರೆಂಬ ಕಾರಣಕ್ಕೆ ಮಂತ್ರಿ ಸ್ಥಾನ ಪಡೆದರೆಂಬ ಮೂದಲಿಕೆ ಹೊತ್ತಿದ್ದ ಶೋಭಾ ಕರಂದ್ಲಾಜೆ ಎಲ್ಲರೂ ಅಚ್ಚರಿಗೊಳ್ಳುವಂತೆ ದಿಟ್ಟತನದಿಂದ,ಕ್ರಿಯಾಶೀಲತೆಯಿಂದ ಮಂತ್ರಿ ಸ್ಥಾನಕ್ಕೆ ಒಂದು ಮೆರಗು ತಂದು ಕೊಟ್ಟಿದ್ದರು.ಅಷ್ಟೇ ಅಲ್ಲ,ಶೋಭಾ ಅವರಿಗೆ ಗೃಹ ಖಾತೆ ಕೊಟ್ಟಿದ್ದರೂ ಸಮರ್ಥವಾಗಿ ನಿಭಾಯಿಸುತ್ತಿದ್ದರೇನೋ ಅನ್ನುವಂತೆ ಕೆಲಸ ಮಾಡುತ್ತಿದ್ದರು.ಬಹುಶ ಯಡಿಯೂರಿ ಸಂಪುಟದಲ್ಲಿದ್ದ ಏಕೈಕ ದಿಟ್ಟರೆಂದರೆ ಶೋಭಾ ಮಾತ್ರ ಅನ್ನಿಸುತ್ತದೆ. ಆದರೆ ಗಣಿ ಕಳ್ಳರಿಗೆ ಇಷ್ಟವಿಲ್ಲ ಎಂಬ ಒಂದೇ  ಕಾರಣಕ್ಕೆ ಶೋಭಾಗೆ ಕೈ ಕೊತ್ತರೆಂದ ಮೇಲೆ ಯಡಿಯೂರಿ ಅದೆಂಥ ನಾಯಕ?  ಈಗ ನೋಡಿದರೆ ನರ್ಸ್ ಜಯಲಕ್ಷ್ಮಿ ಪ್ರಕರಣದಿಂದ ಸುದ್ದಿ ಮಾಡಿದ್ದ ರೇಣುಕಾಚಾರ್ಯ ಎಂಬ ಆಸಾಮಿ ಅದೇನು ಮಾಡಿದರೋ?ಯಡಿಯೂರಪ್ಪ ಆ ಮನುಷ್ಯನಿಗೆ ಅದ್ಯಾಕೆ ಹೆದರಿದರೋ? ಆತನ ಬೆದರಿಕೆ ತಂತ್ರಕ್ಕೆ ಮಣಿದ ಯಡಿಯೂರಪ್ಪ  , ರೇಣುಕಾಚಾರ್ಯನನ್ನೂ ಮಂತ್ರಿ ಮಾಡಿಬಿಟ್ಟರು.ಆತ ಮಹಾನ್ ನಾಯಕನೂ ಆಗಿರಲಿಲ್ಲ,ನರ್ಸ್ ಜಯಲಕ್ಷ್ಮಿ ಪ್ರಕರಣ ಬಿಟ್ಟರೆ ಬೇರೆ ಯಾವುದೇ ಸಾಧನೆಯನ್ನೂ ಮಾಡಿರಲಿಲ್ಲ.ಅನೇಕ ಶಾಸಕರ ವಿರೋಧದ ನಡುವೆಯೂ ಆತನನ್ನು ಮಂತ್ರಿ ಮಾಡುವ ದಿಟ್ಟತನವನ್ನು ಯಡಿಯೂರಿ ಮೆರೆದರು.ಯಡಿಯೂರಪ್ಪನವರು ಎಡವುತ್ತಿರುವುದು ಇಲ್ಲೇ.ಜನಾರ್ದನರೆಡ್ಡಿ ಅಂಡ್ ಕೋ ಮೊದಲ ಸಲ ತಿರುಗಿ ಬಿದ್ದಾಗಲೇ ಆ ಗುಂಪಿನ ಎಲ್ಲ ಮಂತ್ರಿಗಳನ್ನು ವಜಾ ಮಾಡುವ ತಾಖತ್ತನ್ನು ಯಡಿಯೂರಪ್ಪ ಪ್ರದರ್ಶಿಸಬೇಕಿತ್ತು.ಯಾವುದೇ ಕಾರಣಕ್ಕೂ ಶೋಭಾ ಅವರಂಥ ಕ್ರಿಯಾಶೀಲರನ್ನು ಕೈ ಬಿಡುವುದಿಲ್ಲ ಎಂದು ಘೋಷಿಸಬೇಕಿತ್ತು.ಚತುರೋಪಾಯ ಮಾಡಿದರೂ ಅನರ್ಹರನ್ನು ಮಾತ್ರ ಮಂತ್ರಿ ಮಾಡುವುದಿಲ್ಲ ಎಂದು ದಿಟ್ಟತನ ತೋರಬೇಕಿತ್ತು.ಆದರೆ ಯಡಿಯೂರಪ್ಪನವರು ದಿಟ್ಟತನ ತೋರಬೇಕಾದ ಸಂದರ್ಭದಲ್ಲಿ ಹೇಡಿಯಂತೆ ತಲೆಬಾಗಿದರು,ಕನಿಷ್ಠ ರಾಜಿ ಮಾಡಿಕೊಳ್ಳಬೇಕಾದ ಕಡೆ ಮುಂಗೋಪ ತೋರಿದರು.ಕಾಲು ಹಿಡಿಯುವವರು ಕಾಲನ್ನೂ ಎಳೆಯಬಲ್ಲರೆಂಬ ಸತ್ಯವನ್ನು ಯಡಿಯೂರಿ ಮರೆತರು.ಈಗ ಕಾಲ ಮಿಂಚಿದೆ.ಮಾಡಿದ್ದುಣ್ಣೋ ಮಹಾರಾಯ ಎಂಬುದಕ್ಕೆ ಅತ್ತ್ಯುತ್ತಮ ಉದಾಹರಣೆಯಾಗಿ ಯಡಿಯೂರಪ್ಪ ವಿಧಿಯನ್ನು ಹಣಿಯುತ್ತಾ ಕಾಲ ಕಳೆಯಬೇಕಾಗಿದೆ.ಅಯ್ಯೋ ಪಾಪ!

ಶುಕ್ರವಾರ, ಡಿಸೆಂಬರ್ 11, 2009

ವೇಶ್ಯಾವಾಟಿಕೆಗೆ ಅನುಮತಿ ಅಗತ್ಯ

ವೇಶ್ಯಾವಾಟಿಕೆ ಕುರಿತು ಸುಪ್ರೀಂ ಕೋರ್ಟ್ ಕೊನೆಗೂ ಕೇಂದ್ರ ಸರ್ಕಾರಕ್ಕೆ ಅರ್ಥಪೂರ್ಣ ಸಲಹೆ ನೀಡಿದೆ.ಅತ್ಯಂತ ಪುರಾತನ ವೃತ್ತಿಯಾದ ವೇಶ್ಯಾವಾಟಿಕೆಯನ್ನು ನಿಷೇಧ ಮಾಡಲು ಸಾಧ್ಯವಿಲ್ಲವಾದರೆ ಅದಕ್ಕೆ ಅನುಮತಿ ನೀಡುವ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇಂಥದೊಂದು ಪ್ರಗತಿಪರ ನಿಲುವು ತೆಗೆದುಕೊಂಡ ಸುಪ್ರೀಂ ಕೋರ್ಟ್ ನಿಜಕ್ಕೂ ಒಳ್ಳೆ ಹೆಜ್ಜೆ ಇರಿಸಿದೆ.ಥಾಯ್ಲಂಡ್ ನಂಥ ದೇಶದಲ್ಲಿ ವೇಶ್ಯಾವಾಟಿಕೆ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ.ಅಲ್ಲಿ ವೇಶ್ಯೆಯರನ್ನು ತುಂಬಾ ಗೌರವದಿಂದ ಕಾಣುತ್ತಾರೆ.ವೇಶ್ಯಾವಾಟಿಕೆ ಅಲ್ಲಿನ ಪ್ರವಾಸೋದ್ಯಮದ ಅತಿ ಹೆಚ್ಚಿನ ಆದಾಯ ಮೂಲವಾಗಿದೆ.ಆದರೆ ಭಾರತದ ಪರಿಸ್ಥಿತಿಯೇ ಬೇರೆಯಾಗಿದೆ. ಇಲ್ಲಿ ಖದೀಮರು,ಭ್ರಷ್ಟರು,ಮುಖಹೀನ ರಾಜಕಾರಣಿಗಳು,ಅಡ್ಡ ದಾರಿ ಹಿಡಿದು ಸಂಪತ್ತು ಸಂಗ್ರಹಿಸಿದವರು ಭಯ ಮಿಶ್ರಿತ ಗೌರವ ಸಂಪಾದಿಸುತ್ತಾರೆ.ಕೇವಲ ಹೊಟ್ಟೆ ಪಾಡಿಗಾಗಿ ಮೈ ಮಾರಿಕೊಳ್ಳುವವರನ್ನು ತುಂಬಾ ನಿಕೃಷ್ಟವಾಗಿ ಕಾಣಲಾಗುತ್ತಿದೆ.ಪ್ರತಿ ದಿನ ಭಯ,ಅಸಹಾಯಕತೆ,ಹಸಿವು,ಸಂಕಟಗಳಲ್ಲೇ ಬದುಕು ಸಾಗಿಸುವ ದೇಶದ ಅದೆಷ್ಟೋ ವೇಶ್ಯೆಯರು ಭವಿಷ್ಯವಿಲ್ಲದೆ ನಲುಗಿಹೋಗಿದ್ದಾರೆ. ವೇಶ್ಯಾವಾಟಿಕೆಯನ್ನು ಈವರೆಗೆ ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗಿಲ್ಲ,ಅದು ಸಾಧ್ಯವೂ ಅಲ್ಲ,ಸಾಧುವೂ ಅಲ್ಲ.ನಿಷೇಧ ಸಾಧ್ಯವಿಲ್ಲದ ಕಾರಣದಿಂದಲೇ ಇವೊತ್ತಿಗೂ ಪೊಲೀಸರು ಹೊಟ್ಟೆ ಪಾಡಿಗಾಗಿ ವೇಶ್ಯಾವಾಟಿಕೆ ಮಾಡಿದವರನ್ನು ಬಂಧಿಸಿ ಏನೋ ಸಾಹಸ ಮಾಡಿದಂತೆ ಪ್ರತಿ ದಿನ ಬೀಗುತ್ತಿದ್ದಾರೆ,ಟಿವಿ ವಾಹಿನಿಗಳಲ್ಲಿ ಅಂಥವರ ಬೇಟೆಯ ಕುರಿತು ಪೋಲೀಸರ ಮಹಾನ್ ಸಾಹಸಗಾಥೆಗಳು ನಿರಂತರವಾಗಿ ಪ್ರಸಾರವಾಗುತ್ತಿವೆ.ಆದರೆ ವೇಶ್ಯಾವಾಟಿಕೆಯಲ್ಲಿ ಭಾಗಿಯಾದ ಪುರುಷರ ಬೇಟೆ ಮಾಡಿದ ಪ್ರಸಂಗಗಳು ಈವರಗೆ ವರದಿಯಾಗಿಲ್ಲ.ತಲೆ ಹಿಡುಕರು,ಪೊಲೀಸರು,ಲೈಂಗಿಕ ರೋಗ ಹೊತ್ತ ಪುರುಷರ ಹಿಂಸೆಯಿಂದ ತನ್ನನ್ನೇ ಕಳೆದುಕೊಳ್ಳುವ ಹ್ಲಾದಿನಿಯರು ಇಂದು ನರಕಸದೃಶ ಬದುಕಿನಲ್ಲಿ ನರಳುತ್ತಿದ್ದಾರೆ.
ವೇಶ್ಯಾವಾಟಿಕೆಗೆ ಅನುಮತಿ ನೀಡಲು ಸರ್ಕಾರ ಕ್ರಮ ಕೈಗೊಂಡರೆ ಅದರಿಂದ ಅನೇಕ ಸಕಾರಾತ್ಮಕ ಪರಿನಾಮಗಳಾಗಲಿವೆ.ಬಹು ಮುಖ್ಯ ಬದಲಾವಣೆ ಎಂದರೆ ಪ್ರತಿ ದಿನ ನಡೆಯುತ್ತಿರುವ ಅತ್ಯಾಚಾರ ಅದರಲ್ಲೂ ಶಿಶು ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಲಿದೆ.ಅಷ್ಟೇ ಅಲ್ಲ.ವೇಶ್ಯಾವಾಟಿಕೆಯಲ್ಲಿ ತೊಡಗುವವರಿಗೆ ಕಾನೂನಿನ ರಕ್ಷಣೆ ಇರುತ್ತದೆ.ಅಂದರೆ ಪೊಲೀಸರು,ದಲ್ಲಾಳಿಗಳು,ಗಿರಾಕಿಗಳ ಹಿಂಸೆಯಿಂದ ಇವರು ಪಾರಾಗಬಹುದು.ಜೊತೆಗೆ ಯಾರ ಭಯವೂ ಇಲ್ಲದೆ ತಲೆ ಎತ್ತಿ ಸ್ವಾಭಿಮಾನದಿಂದ ಬದುಕಬಹುದು.ನಿರಂತರ ವೈದ್ಯಕೀಯ ತಪಾಸಣೆಯಿಂದ ತನ್ನ ಆರೋಗ್ಯದ ಜತೆ ಗಿರಾಕಿಗಳ ಆರೋಗ್ಯವನ್ನೂ ಕಾಪಾಡಬಹುದು.
ಇದನ್ನು ವಿರೋಧಿಸುವವರು ಸಭ್ಯತೆಯ ಮುಖವಾಡ ತೊಟ್ಟಿರುತ್ತಾರೆಯೇ ಹೊರತು ಅವರಿಗೆ ಇಂಥ ಮಹಿಳೆಯರ ಬಗ್ಗೆ ಯಾವುದೇ ಪ್ರಾಮಾಣಿಕ ಕಾಳಜಿ ಇರುವುದಿಲ್ಲ.
ಮೈಥುನ ಅನ್ನುವುದು ಗಾಳಿ,ಆಹಾರ,ನಿದ್ದೆಯಷ್ಟೇ ಬದುಕಿನ ಅನಿವಾರ್ಯ ಆಗಿರುವುದರಿಂದ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದು ಹೆಚ್ಚು ಸೂಕ್ತ.ಅದರಿಂದ
 ಲೈಂಗಿಕ ಕಾರ್ಯಕರ್ತೆಯರಿಗೆ ಭದ್ರತೆಯೂ ದೊರೆಯುತ್ತದೆ.
ಕೊನೆ ಹನಿ :ಮುಂಬೈನ ಕಾಮಶಾಸ್ತ್ರಜ್ನರೊಬ್ಬರು,ಲೈಂಗಿಕ ಸಮಾವೇಶವೊಂದರಲ್ಲಿ "ಜಗತ್ತಿನ ಶೇಕಡಾ ೯೦ರಷ್ಟು ಜನರು ಮುಷ್ಠಿ ಮೈಥುನ ಮಾಡುತ್ತಾರೆ,ಉಳಿದ ಶೇಕಡಾ ೧೦ರಷ್ಟು ಜನರು ಮುಷ್ಠಿ ಮೈಥುನ ಮಾಡುವುದಿಲ್ಲವೆಂದು ಸುಳ್ಳು ಹೇಳುತ್ತಾರೆ"ಎಂದು ಹೇಳಿದ್ದರು.

ಶನಿವಾರ, ಡಿಸೆಂಬರ್ 5, 2009

ಒಂದು ಕಟ್ಟಡದ ಸುತ್ತ

ರಾತ್ರಿ ಮಲಗುವ ಹೊತ್ತು
ಪುಟ್ಟ 'ಗುಡಿ'ಸಲಲಿದ್ದ
 ಪುಟಾಣಿ ಸಬೀಹಾಳಿಂದ
ಅಪ್ಪ ಮೊಹ್ಮದನಿಗೆ ಪ್ರಶ್ನೆ
"ಅಬ್ಬಾಜಾನ್,ದೇವರೆಂದರೆ ಯಾರು?"
"ಸುಂದರ ಹೃದಯ ಇರುವವರೆಲ್ಲ
ದೇವರೇ ಮಗು,
ಅಂಥ  ಹೃದಯಗಳೇ ದೇವಾಲಯ"
"ಅದಲ್ಲ ಅಬ್ಬಾಜಾನ್,
ನಿಜವಾದ ದೇವರು ಎಲ್ಲಿದ್ದಾನೆ?"
"ಆತ ನಿನ್ನೊಳಗೆ,ನನ್ನೊಳಗೆ
ಎಲ್ಲ ಸುಂದರ ಹೃದಯಗಳೊಳಗೆ
ಇಲ್ಲಿ,ಅಲ್ಲಿ ಎನ್ನದೆ
ಎಲ್ಲೆಲ್ಲೂ ಇರುತ್ತಾನೆ ಮಗು"
"ಆತ ಇಂತಲ್ಲೇ ಹುಟ್ಟಿದ
ಗುಡಿ ಗುಂಡಾರ ಬೇಕು ಅಂತಾರೆ?"
ಮತ್ತೆ ಸಬೀಹಾಳ ಪ್ರಶ್ನೆ
"ದೇವರಿಗೆ ಹುಟ್ಟೂ,ಸಾವೂ,
ಆಕಾರ ಯಾವುದೂ ಇಲ್ಲ ಮಗು"
"ಮತ್ತೇಕೆ ಅಬ್ಬಾಜಾನ್ ದೇವರಿಗೆ
ಕಟ್ಟಡ  ಕಟ್ಟುವ ಕೆಲಸ?
ಜೈಲಿನ ಹಾಗೆ?
"ಹೃದಯ ಬೀಗದ ಕೀಲಿ ಕಳಕೊಂಡವರೆಲ್ಲ
ಈ ದೇವರನ್ನೂ ಬಂಧಿಸಿಡುವ
ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಮಗು
ಇದೆಲ್ಲ ನಿನಗೆ ಬೇಡ ಮಲಕ್ಕೋ"
ಹೊತ್ತು ಕಳೆದಂತೆ ಸಬೀಹಾಳಿಗೆ ನಿದ್ದೆ
"ದಾಡಿವಾಲಾನೊಬ್ಬ
ವಿಷದ ಹಾವು ಸುತ್ತಿಕೊಂಡವನಿಗೆ
ರಕ್ತ ಕೊಟ್ಟಿದ್ದು,
ಮುಸುಕುಧಾರಿಯೊಬ್ಬಳನ್ನು
 ಕರಿಯನೊಬ್ಬ ಅಪ್ಪಿಕೊಂಡದ್ದು
ರಫೀಕ್,ರಮಾ ಓಡಿಹೋದದ್ದು
ಚರಂಡಿಯಲ್ಲಿ ಅವರಿಬ್ಬರ ಹೆಣ ಸಿಕ್ಕಿದ್ದು "
ಮೂರು ಕೊಂಬಿನ ರಾಕ್ಷಸ
ಕೂಗಿಕೊಂಡಿದ್ದು
ಹೀಗೆ ಚಿತ್ರ ವಿಚಿತ್ರ ಕನಸುಗಳು
ಯಾವುದೋ ಕೂಗು
ಘೋಷಣೆಗಳ ಅರಚಾಟ
ಕನಸಿನ ಲೋಕಕ್ಕೆ
ಕತ್ತರಿ ಬಿದ್ದ ಹಾಗೆ
ಎಚ್ಚರಾದ ಸಬೀಹಾಳಿಗೆ
ತನ್ನ ಪುಟ್ಟ ಗುಡಿಸಲನ್ನು
ಬೆಂಕಿ ನುಂಗುತ್ತಿರುವುದು
ಕಂಡಾಗ
ಅಸಹಾಯಕ ಕೂಗು.
ಮತ್ತೆ ಸ್ವಲ್ಪ ಹೊತ್ತಿಗೆ
ಸ್ಮಶಾನ ಮೌನ
ಈಗ ಅಲ್ಲಿ
ಸಬೀಹಾ ಇಲ್ಲ
ಮೊಹ್ಮದ ಇಲ್ಲ
ಪುಟ್ಟ ಗುಡಿಸಲೂ ಇಲ್ಲ
'ಹೇ ರಾಮ್ ' ಎನ್ನಲು
ಗಾಂಧಿಯೂ ಇಲ್ಲ .
ಎಲ್ಲ ಕಟ್ಟಡಕ್ಕಾಗಿ
Only for building
And not Temple
"ಬೋಲೋ ಭಾರತ್ ಮಾತಾಕಿ ಜೈ!"
"ಹಿಂದೂಸ್ಥಾನ್ ಹಮಾರ ಹೈ"
(ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆಂದು ಸಂಘ
ಪರಿವಾರದ ಮಹಾನುಭಾವರು ಬಾಬ್ರಿ ಮಸೀದಿಯನ್ನು ಕೆಡವಿ
ಡಿಸೆಂಬರ್ ೬ಕ್ಕೆ ೧೭ ವರ್ಷ ತುಂಬುತ್ತಿದೆ.ಈ ದುರ್ಘಟನೆಯ
ನೆನಪಿಗೆ)
Powered By Blogger

ಬೆಂಬಲಿಗರು

renukacharya avarannu mantri maadiddu sariye?